ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕೋಟ ಶಿವರಾಮ ಕಾರಂತರ ೧೨೦ ನೇ ಜನ್ಮದಿನದ ಅಂಗವಾಗಿ (೧೦/೧೦/೨೦೨೧ ರವಿವಾರ)
ಕವನ ರಚನೆ ಹಾಗೂ ಕವನ ವಾಚನ ಸ್ಪರ್ಧೆಯಲ್ಲಿ ಭಾಗವಹಿಸಿದವರು :: ಭಾಗ ೦೨
೧೧) ಶೀರ್ಷಿಕೆ : ವಿಜಯಾನಂದದ ಸವಾರಿ
ಸವಾರಿ ಹೊರಟೆ ವಿಜಯಾನಂದ ಬಸ್ಸಿನಲ್ಲಿ
ಬಹು ಆನಂದವಾಯಿತು ನನಗೆ ಮನದಲ್ಲಿ
ಕುಳಿತೆ ಮುದದಿಂದ ಕಿಟಕಿ ಪಕ್ಕದ ಸೀಟಿನಲ್ಲಿ
ಮೊದಲ ಪಯಣವು ನನದು ಈ ಬಸ್ಸಿನಲ್ಲಿ
ಮೆಲುವಾದ ಸಂಗೀತ ಕೇಳುತ ಸಾಗಿತು ಪಯಣ
ನೋಡುತ ಮೈಯನು ಮರೆತೆ ಹಸಿರಿನ ತಾಣ
ಆಗಲೇ ಬಂದಿತು ಊಟ ಮಾಡುವ ನಿಲ್ದಾಣ
ಇಳಿದೆ ತೆಗೆದುಕೊಂಡು ಊಟಕೆ ಬೇಕಾದ ಹಣ
ಊಟವನು ಮುಗಿಸಿ ಬಂದೆ ಏರಲು ಬಸ್ಸನು
ಕಾಣದೇ ಬೋರ್ಡ್ ನು ಆದೆ ನಾನು ಮಂಗನು
ನೋಡಿ ದಂಗಾದೆ ಒಂದೇ ರೀತಿಯ ಬಸ್ಸನು
ಏನೂ ಮಾಡಲು ತೋಚದೇ ಹುಡುಕಿದೆ ಬಸ್ಸನು
ಯಾವ ಬಸ್ಸಿಗೂ ಬರೆದಿಲ್ಲವು ಊರ ಹೆಸರು
ನನಗೆ ನಿಂತ ಹಾಗಾಯಿತು ಒಮ್ಮೆಲೇ ಉಸಿರು
ಪರದಾಟವನು ನೋಡಿ ಕೇಳಿದರು ಒಬ್ಬರು
ಪರಿಸ್ಥಿತಿ ಅರಿತು ಸಹಾಯಕೆ ಬಂದರು ಅವರು
ನೋಡಿ ನಿಮ್ಮ ಬಸ್ಸಿನ ನಂಬರು ಇಲ್ಲ ಇಲ್ಲಿ ಹೆಸರು
ಆಗ ನೋಡಿದೆ ಟಿಕೇಟಿನಲ್ಲಿ ನನ್ನ ಬಸ್ಸಿನ ನಂಬರು
ಅಷ್ಟರಲ್ಲಿ ಬಸ್ಸಿನ ನಿರ್ವಾಹಕರು ಸಹ ಬಂದರು
ಇದು ನನ್ನ ಮೊದಲ ಪಯಣ ಕೇಳಿ ನೀವೆಲ್ಲರೂ
ವೇದಾವತಿ ಭಟ್ಟ ಮುಂಬೈ
೧೨)
ದಸರಾ ಹಬ್ಬ
ಬರುವುದು ಬರುವುದು ದಸರಾ ಹಬ್ಬ
ತರುವುದು ಎಲ್ಲೆಡೆ ಸಡಗರವ
ದುರ್ಗಾ ದೇವಿಯ ಪೂಜೆಯ ಹಬ್ಬ
ಮೂಡಿದೆ ಮನದಲಿ ಭಕ್ತಿ- ಭಾವ
ಒಂಭತ್ತು ದಿನಗಳು ಪೂಜಿಸೋಣ
ದೇವಿಯ ನವ ನವರೂಪಗಳ
ಒಂದಾಗಿ ಎಲ್ಲರೂ ಸ್ಮರಿಸೋಣ
ಜಗನ್ಮಾತೆಯ ಅನುಗ್ರಹವ
ವಿಶೇಷ ಆರಾಧನೆಯು ಜರಗುವುದು
ಕರ್ನಾಟಕದ ಮೈಸೂರಿನಲಿ
ವರ್ಷವು ನಡೆವುದು ಅರಮನೆಯೆದರು
ಜಂಭು ಸವಾರಿ ವಿಜೃಂಭಣೆಯಲಿ
ರಾಜ್ಯದ ವಿವಿಧ ಭಾಗಗಳಲ್ಲಿ
ಇಡುವರು ಜನರು ಗೊಂಬೆಗಳ
ಒಂಭತ್ತು ದಿನಗಳು ಪೂಜಿಪರು
ಸುಂದರ ಮಣ್ಣಿನ ಮೂರ್ತಿಗಳ
ಹತ್ತನೆ ದಿನವನ್ನು ಕರೆವರು ಜನರು
'ವಿಜಯ ದಶಮಿ'ಯ ಹೆಸರಿನಲಿ
ಘೋರ ಸಂಗ್ರಾಮದ ನಂತರ ರಾಮ
ಗೆದ್ದ ರಾವಣನ ಲಂಕೆಯಲಿ
ಅರವಿಂದ ಬಾಯಿರಿ,
ಎಂಟನೇ ತರಗತಿ, ಬೆಂಗಳೂರು - ೩೫.
೧೩)
ಪೂಜ್ಯ ಭಗವದ್ಗೀತೆಯ ಬೆಳಕು
ಮಹಾಭಾರತದೊಳಡಗಿದ್ದ ಭೀಷ್ಮ ಪರ್ವದಿ ಸೇರ್ದ
ವ್ಯಾಸ ಮಹರ್ಷಿ ಕರ ಸಂಜಾತೆ ಪೂಜ್ಯ ಭಗವದ್ಗೀತೆ!
ಕುರು ಪಾಂಡವರ ಕುರುಕ್ಷೇತ್ರ ರಣರಂಗದಾದಿಯಲಿ
ಶ್ರೀ ಕೃಷ್ಣ ಮುಖವಾಣಿ ದಿವ್ಯ ಸಂದೇಶವಾಂತೆ! ೧ !
ಹದಿನೆಂಟು ಅಧ್ಯಾಯ ಏಳುನೂರು ಶ್ಲೋಕಗಳು
ಮಾಸದಷ್ಟು ಮುಗಿಯದಿಹ ಅದ್ಭುತದ ಧಾರೆ!
ಧರ್ಮ ಸ್ಥಾಪನಾಯುಕ್ತ ಭಗವಂತನವತಾರ
ಅಧ್ಯಾತ್ಮ ಬಿತ್ತರಿಸಿ ಸಾಯುಜ್ಯ ತೋರೆ! ೨ !
ದ್ವೈತ ಅದ್ವೈತ ವಿಶಿಷ್ಠಾದ್ವೈತ ಒಗ್ಗೂಡಿ
ಏಕ ಮುಖ ಹರಿವಿನಲಿ ತತ್ವ ಸಮ್ಮಿಲನ!
ತಾಮಸವ ಬಡಿದೊಗೆದು ಸಾತ್ವಿಕದ ನೆಲೆಯಲ್ಲಿ
ಘಂಟನಾದದ ಸದ್ದು ವಿಶ್ವ ಬಹುಮಾನ! ೩ !
ಪಾರ್ಥನನ ಮುಂದಿಟ್ಟು ಲೋಕಕ್ಕೆ ತೆರೆದಿಟ್ಟ
ದುರಿತಗಳ ನೀಗಿಸುವ ಏಕೈಕ ಕಾವ್ಯ!
ಅಂತರಾಳದರಿಗಳವು ಆಸೆಗಳ ಬುದ್ಭುದವು
ಕಿತ್ತೊಗೆವ ಮುನ್ನುಡಿಯ ಬರೆದಿರುವ ಭಾಷ್ಯ! ೪ !
ಚಿತ್ತ ಭಿತ್ತಿಯ ಕಲಕಿ ಕತ್ತಲೆಯ ಮುಸುಕುಗಳ
ಹೊರಗೆಳೆದು ಸುತ್ತಲಿಗೆ. ಬೆಳಕ ಪದರು!
ಸಮಚಿತ್ತ ಸಮಭಾವ ಸಾರುತಿದೆ ಸಾನಿಧ್ಯ
ಸತ್ಯ ಹಣತೆಯ ಹಚ್ಚಿ ಬೆಳಗುತಿಹ ಸೊಡರು! ೫ !
ಕರ್ಮಯೋಗದಿ ಮುಂದೆ ಭಕ್ತಿ ಧ್ಯಾನವು ಸೇರಿ
ಜ್ಞಾನಾರ್ಜನೆಯ ಸಿದ್ಧಿಯಲಿ ಮುಕ್ತಿ ದಾರಿ!
ಪರಮಾತ್ಮನೇ ಶರಣು ಅರ್ಪಿಸುತ ತಲೆಬಾಗು
ಕೈ ಹಿಡಿದು ನಡೆಸುವನು ದಾರಿ ತೋರಿ! ೬ !
ಬಿ ಸತ್ಯವತಿ ಭಟ್ ಕೊಳಚಪ್ಪು, ಮಂಗಳೂರು
೧೪)
ಶೀರ್ಷಿಕೆ - " ಒಡ್ಡೋಲಗ "
ಬಲ್ಲಿರೇನಯ್ಯಾ...ದೇಶದ ಗುರುಗಳೆಲ್ಲರ ಗುರು ಯಾರೆಂದು ಬಲ್ಲಿರಿ..ನಾವೇ ಸರಿ ಗುರುವರ್ಯ..
ಎಂದಿನಂತೆಯೇ ಮುಂಜಾನೆಯ ನಿತ್ಯ ವಿಧಿಗಳನ್ನು ಪೂರೈಸಿ...ಒಡ್ಡೋಲಗ ನೀಡಿ ಅವಲೋಕಿಸುವಾಗ
ಶಿಕ್ಷಕರ ಪಾಡು ಅದೆಂತು ಪೇಳಲಿ ದೇಶದ ಸರ್ವಮುಖ ಏಳ್ಗೆಗಾಗಿ ಶಿಕ್ಷಣವೀಯುವುದು ಗುರುವಿನ ಗುರಿ
ವಿರಾಮವಿಲ್ಲದೆ ಕಾಠಿಣ್ಯದ ಸೂಕ್ಷ್ಮತೆಯ ಅರಿತು...ಶಿಷ್ಯರ ಸತ್ಪ್ರಜೆ ಗಳಾಗಿಸುವುದು ಹೊಣೆ... ಆದರೇನು
ಮಾಡೋಣ.?ಗುರು ತಾ ನಿಕೋಪಿ ನಿಗರ್ವಿ- ಅನ್ಯಾಯಕ್ಕೆ ಸೆಟೆಯಲಾರ , ಅನ್ಯಾಯವ ಹೊತ್ತು ಬವಣೆ
ಪಡುವ...ನೋವ ನುಂಗುತ ಬಸವಳಿವ - ಇಂತಿದೆ ಕಾಲದ ಸ್ಥಿತಿ.../ ಮನೆ ಗಣತಿ,ಜನ ಗಣತಿ,ಮತ ಗಣತಿ
ಮುದುಕರ ಹೆಳವರ ಗಣತಿ,ಪ್ರಯೋಜಕ ಅಪ್ರಯೋಜಕರ ಗಣತಿ,ಗಣತಿ ಪ್ರಾಯೋಜಕತೆಗೆ ನೂಕುವರು
ಈ ಶಿಕ್ಷಕರನೆ...ಅಷ್ಟೆಯೇ..ಕೊರೋನ ಸೋಂಕಿತರ ಗಣತಿ,ಶಂಕಿತರ ಗಣತಿ,ಗುಣವಾದವರ ಗಣತಿ,ಹೆಣ
ವಾದವರ ಗಣತಿ... ಗುರುವಿಗೆ ಮತ್ತೇನು ಕೆಲಸ..ಆದರೂ ಲೆಕ್ಕ ಸಿಕ್ಕಿಲ್ಲ..ಈ ಸಾವಿನ ಗಣತಿ ಕಾಯಕದಲ್ಲಿ
ಸೋಂಕು ಪೀಡಿತರಾಗಿ ಸತ್ತು..ಹೆಣವಾಗಿ ಹೋದ ಶಿಕ್ಷಕರ ಗಣತಿ..ಅನಾಥರಾದ ಅವರ ಹೆಂಡತಿ ಮಕ್ಕಳ
ಗಣತಿ.../ ಗುರುವರ್ಯನಾದ ನಾನು ಶಿಕ್ಷಕರಲ್ಲಿ ಸಮಾಲೋಚಿಸುವುದೊಳಿತು ..ಗುರುತನವೆಂಬುದು
ಕೆಲಸವಲ್ಲ..ಹೊಣೆಯರಿತ ಜವಾಬ್ದಾರಿ..ಅದು ಕಾಲಾತೀತ..ದೇಶ ಸುಭಿಕ್ಷೆಯ ದೀಕ್ಷೆಯೊಂದೇ ಈ ಶಿಕ್ಷಕನ
ಗುರಿಯೆಂದು ಸಾರಿದರಾಗದೇ...|| ವಂದನೆಗಳು ||
೧೫)
ಶೀರ್ಷಿಕೆ -- ದಸರದ ಸಂಭ್ರಮ
ನವರಾತ್ರಿಯ ಹಬ್ಬದ ದಸರವು
ನಾನಾ ದೇವಿಯ ಪೂಜೆಯು
ದುರ್ಜನರ ಶಿಕ್ಷಿಸಲು ಅವತರಿಸಿದಳು
ಸಜ್ಜನರ ರಕ್ಷಿಸುತ್ತಾ ಸಲಹಿದಳು
ಹಿರಿಯರಿಂದ ಕಿರಿಯರ ತನಕವು
ಸಡಗರ ತಂದಿದೆ ದಸರಾ ಹಬ್ಬವು
ಎಲ್ಲರೂ ಒಂದೆಡೆ ಸೇರುತ್ತಲಿ
ಹರುಷದ ಸಮಯವು ಬಂದೊದಗುತಲಿ
ಸರಸ್ವತಿಯ ದುರ್ಗೆಯ ಪೂಜೆಯು
ಜೊತೆಯಲ್ಲಿ ನಡೆದಿದೆ ವಾಹನ ಪೂಜೆಯು
ಗೊಂಬೆಯ ಕೂಡಿಸಿ ಬಾಗೀಣ ಹಂಚುತಲಿ
ಸಾಗಿದೆ ಹೀಗೆ ದಸರಾ ಹಬ್ಬ ಹರ್ಷದಲಿ
ಶುದ್ಧಗೊಳಿಸಿದ ಮನೆ-ಮನಗಳು
ಭಕ್ತಿಯಿಂದ ಪೂಜಿಸಿದೆ ನಾನಾ ಪುಷ್ಪಗಳು
ಹಣ್ಣು-ಹಂಪಲು ನೈವೇದ್ಯಗಳು ಅರ್ಪಿಸುತಲಿ
ದೀಪ ದೂಪ ಆರತಿ ಎತ್ತಿ ಬೆಳಗುತಲಿ
ದೇಶಕ್ಕೆ ಪ್ರಸಿದ್ಧಿಯು ಮೈಸೂರು ದಸರವು
ಎಲ್ಲೆಡೆ ವಿದ್ಯುತ್ ದೀಪದ ವೈಭೋಗವು
ಚಾಮುಂಡಿಬೆಟ್ಟದ ದೇವಿ ಅಲಂಕಾರವು
ಕನ್ನಂಬಾಡಿ ಕಟ್ಟೆಯ ಸೌಂದರ್ಯದ ಸಿರಿಯು
ನಾನಾ ಪಂದ್ಯಾಟಗಳ ಸ್ಪರ್ಧೆ ಗಳಿಗಾಗಿ
ಅವಕಾಶವೊದಗಿಸಿದೆ ಈ ಸುದಿನವು
ಕೈಬೀಸಿ ಕರೆಯುತ್ತಿದೆ ಪ್ರವಾಸಿಗಳನ್ನು
ಒಮ್ಮೆ ನೋಡ ಬನ್ನಿ ಮೈಸೂರು ದಸರಾವನ್ನು
ಜಂಬೂಸವಾರಿಯ ದೇವಿಯ ಮೆರವಣಿಗೆಯು
ಎಲ್ಲೆಲ್ಲೂ ನೆರೆದಿದೆ ಜನರ ಸಮೂಹವು
ಬನ್ನಿಯ ಹಂಚುತ ಸಡಗರ ಸಂಭ್ರಮದಿ
ನಡೆದಿದೆ ದಸರಾ ಹಬ್ಬದ ಶುಭ ಸಂದರ್ಭದಲಿ
ಕೆ.ಆರ್.ಉಷ ದಿದ್ದಿಗಿ, ಹೈದರಾಬಾದ್
೧೬)
ಶೀರ್ಷಿಕೆ: ಕನಸು
ಕನಸು ಹೆಣೆಯುವ
ಸೂಜಿಗೆ ತೂತಿಲ್ಲ
ಕುರುಡನ ಕನಸಿಗೆ
ಬಣ್ಣಗಳ ಬವಣೆಯಿಲ್ಲ
ಶಿಕಾರಿ ಕನಸಿಗೆ
ರಾತ್ರಿಯ ಅಮಲಿಲ್ಲ
***
ಬಡವನ ಒಲೆಗೆ
ಬೆಂಕಿಯ ಪರಿಚಯವಿಲ್ಲ
ದನಿಕನ ನಾಯಿಗೆ
ಹಸಿವಿನ ಅರಿವಿಲ್ಲ
ಫಕೀರನ ಜಡಕ್ಕೆ
ಸ್ಮಶಾನದಲೂ ಸ್ಥಳವಿಲ್ಲ
***
ಧನಿಕನ ಮನೆಯ
ಕಪಾಟಲಿ ಸ್ಥಳವಿಲ್ಲ
ಬಡಪಾಯಿ ಶವಕೆ
ಕಫನಿನ ಹೊದಿಕೆಯಿಲ್ಲ
ಬಲ್ಲಿದನ ದೋಸೆಯಲ್ಲ,
ಕಾವಲಿಯ ತೂತೇ ಕಾಣಿಸಲ್ಲ
***
ಸುರಿಸುವ ಕಣ್ಣೀರಿಗೆ
ಸಿಹಿಉಪ್ಪಿನ ಪುಕಾರಿಲ್ಲ
ನಶೆಯೇರಿದ ಜಗಕೆ
ಉತ್ತಮನ ಜರೂರತ್ತಿಲ್ಲ
ಕೆಟ್ಟವನಿಸಿಬಿಡಲು
ಸಬೂಬುಗಳೇ ಬೇಕಿಲ್ಲ
***
ಹಗಲಿರುಳಿಗೆ ನಮ್ಮ
ರುಜುವಾತು ಬೇಕಿಲ್ಲ
ಏರಿನಿಂತ ಆಗಸಕೆ
ಆಲದಮರದ ಹಂಗಿಲ್ಲ
ಅಲೆಮಾರಿಗೆ ಅರಸನಿಗೆ
ಪ್ರಾಣದ ಭಯವಿಲ್ಲ
***
-ಲುಕ್ಮಾನ್ ಅಡ್ಯಾರ್
ಕಾನೂನು ವಿದ್ಯಾರ್ಥಿ ಮಂಗಳೂರುಬಾ
೧೭)
ಬಾಬಣ್ಣನ ಕವನಗಳು.....
🌹 ಸುಂದರ ಸೃಷ್ಟಿ 🌹
ಸೌಂದರ್ಯದ ಲಹರಿಯ ಈ ಸ್ವರ
ಭಾವನೆಯಲ್ಲಿ ಬೆಸೆದಿದೆ ಸುಸ್ವರ
ಸೃಷ್ಟಿಯ ವೈಭವವೇ ನವ ಸಿಂಗಾರ
ಅರಳಿಸಿ ಮೂಡಿಸಿದೆ ಸಿರಿ ಮಂದಾರ llಪll
ಅಣು ಅಣುವಿನ ಆತ್ಮದಿ ವಿಸ್ಮಯ
ವೈಶಿಷ್ಟ್ಯವು ಹೇಳುತ್ತಿದೆ ಅವಿಸ್ಮಯ
ಪ್ರಕೃತಿಯ ಸೊಗಡಿನ ಈ ಮಾಯ
ಕಾಲಚಕ್ರನ ನಿಯಮದಿ ಈ ಕಾಯ ll೧ll
ಪ್ರತಿದಿನ ಪ್ರತಿ ಕ್ಷಣ ಬದುಕಿನ ಆಕಾರ
ತಂತ್ರ ನಯವನ್ನು ಮಾಡಿದೆ ಸುಂದರ
ಹೊಸತನಕ್ಕೆ ನಾಂದಿಯಾಗುವ ಸಾಕಾರ
ಮಂತ್ರಮುಗ್ಧಗೊಳಿಸುವ ಸೃಷ್ಟಿ ಆಗರ ll೨ll
ನಿಷ್ಕಲ್ಮಶ ವಿಶಾಲ ವಿ ಸುಂದರ ಸೃಷ್ಟಿ
ಸೊಬಗನ್ನು ಸವಿಯಲು ನೀಡಿದೆ ದೃಷ್ಟಿ
ಕಾಲಕ್ಕನುಗುಣವಾಗಿ ಬರುತ್ತಿದೆ ವೃಷ್ಟಿ
ಪ್ರಕೃತಿಯ ಮಡಿಲಲ್ಲಿ ನಾವಿಲ್ಲಿ ಮುಷ್ಟಿ ll೩ll
ಪಂಚಭೂತಗಳ ತತ್ವವೇ ಈ ಜಗವು
ಪಂಚೇಂದ್ರಿಯ ದಿಂದ ನೀಡಿದೆ ನಗುವು
ಪ್ರತಿ ಆತ್ಮಕ್ಕೂ ಸಾವಿರಾರು ಮೊಗವು
ಬೆಳೆಸುತ ಕಾಯುತಿದೆ ಸಕಲ ಕಾಲವು ll೪ll
ಪ್ರಶಾಂತ್ ಆರ್ ದೈವಜ್ಞ
ಕರೇಕ್ಯಾತನಹಳ್ಳಿ
೧೮) ವಿಜಯೋತ್ಸವ
ಶರದೃತುವಿನ ಆಶ್ವಯುಜ ಮಾಸದಲಿ
ತಾಯಿ ಶಕ್ತಿಯು ಅವತಾರ ತಾಳುತಲಿ
ಬಂದಳು ನವದುರ್ಗೆಯರ ರೂಪತಾಳಿ
ಭುವಿಯಲಿ ಧರ್ಮಸಂಸ್ಥಾಪನೆಗಾಗಿ
ತಾಮಸದ ಮೇಲಿನ ಸಾತ್ವಿಕತೆಯ ಜಯ
ಲಕ್ಷ್ಮಿ ಸರಸ್ವತಿ ಪಾರ್ವತಿಯರೊಂದಾಗಿ
ಅಭಯ ಪರಂಪರೆಯ ಅಭಿಯಾನ ಸಾಗುತ್ತಿದೆ ದಿನದಿನವೂ
ಅಧ್ಯಾತ್ಮವು ಸಮಾಜದೊಳಗೆ ಹಾಸುಹೊಕ್ಕಾಗಿರಲು
ವಾಸ್ತವದ ಬದುಕಿನಲ್ಲೀಗ ಬಹು ಪ್ರಸ್ತುತವು
ಸಾಮಾಜಿಕ ಪಿಡುಗುಗಳು ಅಟ್ಟಹಾಸಗೈದಿರಲು ಸಜ್ಜನತೆಯು ಮತ್ತೆ ವಿಜೃಂಬಿಸಬೇಕಾಗಿದೆ
ಇನ್ನೊಮ್ಮೆ ದೇವಿಯು ಉಗ್ರರೂಪ ತಾಳಬೇಕಿದೆ
ಹೊಂದಬೇಕಿದೆ ಅರಿಷಡ್ವರ್ಗಗಳ ಹತೋಟಿ
ಅಂತರಾಳದ ಕೊಳದ ಹಾವಸೆಯ ತೆಗೆದು
ನಿವಾರಿಸುತೆ ಅಂತರಂಗದ ಒಳತೋಟಿ
ನಿಜಾರ್ಥದಲ್ಲಿ ಆಚರಿಸಬೇಕಿದೆ ವಿಜಯೋತ್ಸವ
ಶಮೀವೃಕ್ಷವನು ಪೂಜಿಸಿ ಆಗೋಣ ಪುನೀತ
ದುಶ್ಚಟಗಳ ಸೀಮೋಲ್ಲಂಘನ ವ್ರತದಲಿ ನಿರತ
ಯಾಂತ್ರಿಕ ಬದುಕಿನಲೀ ಆಚರಣೆ ವಿಹಿತ
ಏಕತಾನತೆಯಿಂದ ವಿಮುಕ್ತಿ ಮನ ಮುದಿತ
ಸುಜಾತಾ ರವೀಶ್
ಮೈಸೂರು
೧೯)
ಶೀರ್ಷಿಕೆ : "ನೆನಪು"
ಗಾಂಧೀ ಎಂಬ ಶಾಂತಿ ದೂತನು
ನಮಗೆ ಕೊಡಿಸಿದ ಸ್ವಾತಂತ್ರ್ಯ
ದುಡ್ಡು,ಕಾಸು ಯಾವದು ನೀಡದೆ
ಸ್ವತಂತ್ರ್ಯ ರಾದೆವು ನಾವೆಲ್ಲಾ
ಸ್ವತಂತ್ರ್ಯ ರಾದೆವು ನಾವೆಲ್ಲಾ...
ಬಾಲಕ ಗಾಂಧೀ ತುಂಬಾ ತುಂಟ
ಊರನು ಸುತ್ತಿ ಶಾಲೆ ಕಲೆತಾ
ಜಾಣ ತನದಲಿ ಎಲ್ಲರ ಗೆದ್ದ
ಶಾಂತಿ ಮಂತ್ರದಿ ದೊರಕಿಸಿಕೊಟ್ಟರು
ಸ್ವಾತಂತ್ರ್ಯ ಈ ಸ್ವಾತಂತ್ರ್ಯ
ಸ್ವಾತಂತ್ರ್ಯ ಈ ಸ್ವಾತಂತ್ರ್ಯ...
ಹಿಂಸೆಯ ದಾರಿ ಬಹು ದುಬಾರಿ
ಅಹಿಂಸಾ ಮಾರ್ಗದಿ ನಡೆಯೋಣ
ಸತ್ಯಾಗ್ರಹ, ಕಾಲ್ನಡಿಗೆ, ಉಪವಾಸ ದಿಂದ
ಮನ ಒಲಿಸೋಣ (೨)
ಮನದಲಿ ಅನುಕಂಪದ ಅಲೆಯನು ಮೂಡಿಸಿ
ಪಡೆಯೋಣಾ ನಾವು ಸ್ವಾತಂತ್ರ್ಯ,
ಪಡೆಯೋಣಾ ನಾವು ಸ್ವಾತಂತ್ರ್ಯ...
ದೇಶ ಸೇವೆಯು ದೇವರ ಸೇವೆ
ಎಂಬುತ ನಡೆದಾ ಮಹಾತ್ಮನು ಇವನು
ಇವರ ಹಾದಿಯು ನಮಗೆ ಸ್ಪೂರ್ತಿಯು
ಅರಿತು ಬಾಳಲು ಇವರೆ ಜ್ಯೋತಿಯು
ಅದನು ತಿಳಿಯಲು ಈ ಜಯಂತಿಯು,
ಈ ಜಯಂತಿಯು,ಈ ಜಯಂತಿಯು...
ಶ್ರೀ ನರೇಂದ್ರ ನಾ, ವಾಳ್ವೇಕರ
ಉಪನ್ಯಾಸಕರು
ವ್ಹಿ.ಪಿ,ಎಸ್,ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ,
ರಾಮದುರ್ಗ.....✍🏻✍🏻🙏
೨೦)
ಗಾಂಧಿ ತಾತ
ಗಾಂಧಿ ತಾತ ಗಾಂಧಿ ತಾತ
ನನ್ನ ಪ್ರೀತಿಯ ಗಾಂಧಿ ತಾತ
ಬಡವ ಬಗ್ಗದರಿಗನ್ನದಾತ
ದೇಶಕ್ಕೆಲ್ಲ ರಾಷ್ಟ್ರಪಿತ
ಸ್ವಾತಂತ್ರ್ಯವನ್ನು ತಂದುಕೊಟ್ಟರು
ಜನರ ಮನಸ್ಸನ್ನು ಗೆದ್ದರು
ಪೋರಬಂದರ್ ನಲ್ಲಿ ಜನಿಸಿ
ಮಹಾ ಮಹಾತ್ಮರೆನಿಸಿದರು
ಗಾಂಧಿಯವರ ತತ್ವಗಳನ್ನು
ನಾವನುಸರಿಸೋಣ
ರಾಮರಾಜ್ಯದ ಕನಸನ್ನು
ನಾವ್ ನನಸಾಗಿಸೋಣ
- ಧನ್ವಿತಾ ಕಾರಂತ್
ಏಳನೇ ತರಗತಿ ,ದ.ಕ.
೨೧) ಕಡಲು ಕಾರಂತ
ಕಡಲ ತೀರದ ಭಾರ್ಗವನು ಇವನದು
ಕಡಲ ದಾಟಿದ ಹೆಸರು
ಒಡಲ ಮೀರಿದ ಕಸುವು
ಮಡಿಲ ಧನ್ಯತೆಯುಸಿರು|
ಎಲ್ಲರಂತಿವನೂ ಹಸಿರ ಮಧ್ಯದ ಕೂಸು
ಬಲ್ಲವರ ಒಡನಾಡಿ
ಬಲ್ಲಿದರ ಸಹವರ್ತಿ
ಕಲ್ಲಲರಳಿದ ಸುಮವು|
ಬುದ್ಧಿಯಲಿ ಇವನ ಸರಿಸಾಟಿ ಯಾರಿಲ್ಲ
ವಿದ್ಯೆಯಿವನದು ಮಿತವು
ತಿದ್ದಿ ತೀಡುವ ಗುಣವು
ಮುದ್ದು ಮಗುವಿನ ಮನವು|
ಸಾಹಿತ್ಯ ಸೇವೆಯಲಿ ಅಪರಿಮಿತ ಉತ್ಸಾಹ
ಮಾಹಿತಿಯ ಭಂಡಾರ
ಮೋಹಿಸುವ ಕಲೆಗಾರ
ಮಹಿಪನಿವ ಕನ್ನಡಕೆ|
ಆಡು ಮುಟ್ಟದ ಸೊಪ್ಪು ಇಲ್ಲವೆಂದಾದರೆ
ದುಡಿದನಿವ ಭಾಷೆಯಲಿ
ಕಾಡಿದನು ಪ್ರತಿಯೊಂದ
ಆಡಿಸಿದ ಅಕ್ಷರವ |
ನಡೆದಾಡಿದಂತಹ ವಿಶ್ವಕೋಶವು ಇವನು
ಕಡಲಿನಷ್ಟೇ ಭರವು
ಕಡಲಿನಂತೆಯೆ ಆಳ
ಹುಡುಕಿ ಮುಗಿಯದ ಹವಳ|
***
ಶ್ರೀಕಲಾ ಬಿ ಕಾರಂತ್
ಅಳಿಕೆ
ಬಂಟ್ವಾಳ ತಾಲೂಕು, ದ.ಕ.
ಗ್ರಾಮ ಕರಣಿಕೆ
೨೨) ಕೋಟಿಗೊಬ್ಬರು.
ಕೋಟ ಶ್ರೀ ಶಿವರಾಮ ಕಾರಂತರು
ಬಾಳು ಅವರದು ಆಕರ ಗ್ರಂಥವು
ಒಂದೇ, ಎರಡೇ ಹಲವಾರು ಬಗೆ
ಮೊಗದಲ್ಲರುಳುವ ತುಂಬು ನಗೆ.
ಸಂಸ್ಕೃತಿಯ ಬೇರಿನಲ್ಲಿ ಯಕ್ಷಗಾನವು
ಸಾಹಿತ್ಯದುಸಿರಲ್ಲಿ ಅವರ ಯಾನವು
ಮೂಕಜ್ಜಿಯ ಕನಸಿನ ಚಿತ್ತಾರದಲ್ಲಿ
ಮನ ಮನದಲ್ಲದು ಸವಿಸ್ತಾರವು.
ಕಡಲಲೆಗಳು ರಭಸದಿ ಆರ್ಭಟಿಸುವಂತೆ
ಮಾತಿನ ದಾಟಿಯು ಬಲು ಗಟ್ಟಿಯಂತೆ
ಥೈ,ಥೈ, ತಕ ಥೈ,ಥೈ ಗಾನಲಹರಿಯಲ್ಲಿ
ಭಾವ ಭಂಗಿಯದು ಸೈ,ಸೈ, ಸೈಯಲ್ಲಿ.
ಮಕ್ಕಳ ಪ್ರೀತಿಯ ಕಾರಂತರಜ್ಜರಿವರು
ಕಥೆಯನು ಹೇಳುವ ಹಿರಿಯಜ್ಜರವರು
ಚಿಣ್ಣರಿಗಾಗಿಯೇ ಕಾರಂತರ ವನವು
ಮಕ್ಕಳ ಮೊಗದಲ್ಲಿ ಅರಳಿದ ಮನವು.
ಕಾರಂತರ ಹೆಜ್ಜೆ,ಹೆಜ್ಜೆಯ ಅಚ್ಚಿನಲ್ಲಿ
ಸಾಹಿತ್ಯ, ಯಕ್ಷಗಾನದ ಹೊಂಬೆಳಕು
ವಿಶ್ವ ವಿದ್ಯಾಲಯ ಮಾಡದ ಕಾಯಕವು
ಮಾದರಿ ಬದುಕು,ಬರಹ ಸಾರ್ಥಕವು.
ಆಡು ಮುಟ್ಟದ ಸೊಪ್ಪಿಲ್ಲವಂತೆ...
ಕಾರಂತರ ಬರವಣಿಗೆಗೆ ಎಣೆ ಇಲ್ಲದಂತೆ
ಮೂಕಜ್ಜಿಯ ಕನಸು ಜ್ಞಾನಪೀಠ ಪುರಸ್ಕೃತರು
ಕಡಲ ತೀರದ ನೆನಪಲ್ಲಿ ಭಾರ್ಗವರು..
ವೀಣಾ ಕೃಷ್ಣಮೂರ್ತಿ, ದಾವಣಗೆರೆ.
೨೩)
ಶೀರ್ಷಿಕೆ : ನವರಾತ್ರಿ
ಸಂಪಿಗೆಯ ನಗೆ ಚಂದ ಮಲ್ಲಿಗೆಯ ನುಡಿ ಚಂದ
ನವರಾತ್ರಿಯಲಿ ನವದುರ್ಗೆಯರ ಪೂಜೆಯ ಅಂದ
ಜೇನಿನ ಸಿಹಿ ಚಂದ ಹೂವಿನ ಸ್ಪರ್ಶ ಚಂದ
ನಾಡ ಹಬ್ಬ ದಸರಾದ ವೈಭವ ಇನ್ನೂ ಅಂದ!!
ಆಕಾಶದ ವೈಯ್ಯಾರಕೆ ಮೋಡಗಳೇ ಚಂದ
ಅರಮನೆಗೆ ಬಣ್ಣದ ದೀಪಾಲಂಕಾರವೇ ಅಂದ
ದಸರಾ ಗೊಂಬೆಗಳ ಕುಣಿತ ಬಲು ಚಂದ
ಗಿರಿವನಗಳ ಬೆಟ್ಟಕಾಡುಗಳ ನಾಡೇ ಅಂದ!!
ಎಲ್ಲೆಲ್ಲೂ ಕಾಣುವುದು ಬನ್ನಿ ಗಿಡದ ಹಸಿರೆಲೆಗಳ ಚಂದ
ಸರ್ವಧರ್ಮ ಭಾವನೆಗಳ ತುಂಬಿದ ಹಾಡಿನ ಅಂದ
ನಾಡ ಹಬ್ಬ ದಸರಾ ಮೆರವಣಿಗೆ ನೋಡಲು ಚಂದ
ಚಾಮುಂಡೇಶ್ವರಿ ತಾಯಿ ಮುಡಿಗೆ ಹೂಗಳ ಅಂದ!!
ಅಂಬರ ಚುಂಬಿಸುವ ಹಕ್ಕಿಯ ಹಾರಾಟ ಚಂದ
ಪಳ ಪಳ ಹೊಳೆಯುವ ನಗರದ ಬೆಳಕಿನ ಅಂದ
ಹೂದೋಟದಿ ದುಂಬಿಗಳ ಕಲರವ ಚಂದ
ಕರುನಾಡಿನ ಬೆಟ್ಟಗಳಲಿ ಹಚ್ಚ ಹಸುರ ಸಿರಿಯ ಅಂದ!!
ವಸಂತ ಮಾಸಕೆ ಕೋಗಿಲೆಯ ಗಾಯನ ಚಂದ
ನವರಾತ್ರಿ ಉತ್ಸವಕ್ಕೆ ನವರಂಗುಗಳ ಅಂದ
ಎಲೆಯ ಮೇಲೆ ಇಬ್ಬನಿ ಹನಿಗಳ ಝೇಂಕಾರ ಚಂದ
ಮನೆ ಮನೆಗಳಲಿ ಬೆಳಗುವ ದೀಪಗಳ ಅಂದ!!
✍️ ಪುಷ್ಪ ಪ್ರಸಾದ್ ಉಡುಪಿ
೨೪) ನಮ್ಮ ಬಾಪು
🌸🌸🌸🌸🌸🌸🌸🌸🌸🌸🌸
ಜೀವನದ ಪಾಠ ಕಲಿಸುವವರು
'ಕ್ಷಮೆ' ಪ್ರಬಲರ ಲಕ್ಷಣ ಎನ್ನುವವರು
ಭವ್ಯ ಭಾರತದ ಕನಸು ಕಟ್ಟಿದವರು
ಅವರೇ ನಮ್ಮ 'ಬಾಪು'
'ಸತ್ಯವೇ ದೇವರು' ಎಂದವರು
ಕೋಲು ಹಿಡಿದು ಅಹಿಂಸೆಯ ಪಾಠ ಕಲಿಸಿದವರು
ರಾಮರಾಜ್ಯದ ಕನಸು ಕಟ್ಟಿದವರು
ಅವರೇ ನಮ್ಮ 'ಮಹಾತ್ಮ'
ರಾಷ್ಟ್ರಕ್ಕೆ ಏಕತೆಯ ಪಾಠ ಕಲಿಸಿದವರು
ವಿದೇಶಿ ವಸ್ತುಗಳನ್ನು ಬಹಿಷ್ಕರಿಸಿ ದವರು
'ವಿಶ್ವಶಾಂತಿ' ಸಾರಿದವರು
ಅವರೇ ನಮ್ಮ 'ಗಾಂಧಿ'
ಬನ್ನಿ! ಗಾಂಧೀಜಿಯವರ ಆದರ್ಶಗಳನ್ನು ಸ್ಮರಿಸುತ್ತ
ಅವರ ಭಾವಚಿತ್ರವನ್ನು ವಂದಿಸಿ ಗೌರವಿಸುತ್ತ
ಗಾಂಧೀಜಯಂತಿಯ ಪಾವನ ದಿನದಂದು
ಕೋಟಿ ಕೋಟಿ ನಮನ ಗಳನ್ನು ಸಲ್ಲಿಸೋಣ.
******
ಹೆಸರು : ಕು. ನಿಧಿ.ಬಿ ನಾಯ್ಕ್
ಊರು : ದಾಂಡೇಲಿ ( ಉ.ಕ )
ತರಗತಿ : ೭ ನೇ ದಾಂಡೇಲಿ
೨೫) ನಮ್ಮ ಕಾರಂತಜ್ಜ
ಬತ್ತದ ತೊರೆಯಾ ಬಳಗದ ನೆರಳದು
ಸುತ್ತಲು ಹರಡಿದೆ ಸಂಭ್ರಮದಿ
ಚಿತ್ತದಿ ಉದಿಸಿದ ಭಾವಕೆ ಸ್ಪರ್ಶವ
ಮೆತ್ತಗೆ ನೀಡಿದೆ ಹರುಷದಲಿ||
ಉಡುಪಿಯ ಜಿಲ್ಲೆಯ ಕೋಟದಿ ನೆಲೆಸಿದ
ಕಡಲಿನ ತಡಿಯಾ ಭಾರ್ಗವರು
ತುಡಿತವು ಹೆಚ್ಚಿದೆ ಬರೆಯಲು ಕವನವ
ಮಿಡಿದಿದೆ ಭಾವದ ಸ್ಪಂದನವು||
ಚೋಮನ ದುಡಿಯಲಿ ದಲಿತರ ಭಾವವು
ಪಾಮರ ಪಂಡಿತರೆಲ್ಲರನು
ರೋಮಾಂಚನವನು ನೀಡಿದ ಕತೆಯನು
ಸಾಮದಿ ಕೂರುತ ಕೇಳಿರಲು||
ಬೆಟ್ಟದ ಜೀವಕೆ ಸಾಟಿಯು ಏನಿದೆ
ದಿಟ್ಟತೆಯಿಂದಲಿ ಅಡಿಯಿಡಲು
ಮುಟ್ಟಲು ಗುರಿಯನು ತಟ್ಟನೆ ಏರುತ
ಕಟ್ಟಿದ ಬರಹದಿ ಹುರುಳಿರಲು||
ಮಕ್ಕಳು ಎಂದರೆ ಮಮತೆಯ ಆಗರ
ತೆಕ್ಕೆಯ ರಕ್ಷೆಯು ಬಾಲವನ
ಹಕ್ಕಿಯ ತೆರದಲಿ ಹಾರುತ ಕುಣಿಯುತ
ಅಕ್ಕರ ಕಲಿಯುವ ಶಾಲಿವನ||
ನಡೆದಾಡುತಿರುವ ವಿಶ್ವದ ಕೋಶವೆ
ಪಡೆದಿಹ ಪ್ರಶಸ್ತಿಯು ಅಗಣಿತವು
ನುಡಿಯಲಿ ಕುಣಿತದಿ ಆಸಕ್ತಿ ತೋರುತ
ಒಡಲಿನ ಪ್ರೀತಿಯ ಬಯಲಾಟ||
ಲಕ್ಷ್ಮೀ ವಿ ಭಟ್ ಮಂಜೇಶ್ವರ
೨೬)
ಶೀರ್ಷಿಕೆ:-ಪ್ರೀತಿಯ ಕಾರಂತಜ್ಜ
ಕಡಲ ತೀರದ ಭಾರ್ಗವರಿವರು
ಹೆಮ್ಮೆಯ ಶಿವರಮಕಾರಂತರು/
ಕನ್ನಡ ನಾಡಿನ ಸಾಹಿತಿಯಿವರು
ಕನ್ನಡಾಂಬೆಯ ವರಪುತ್ರರು//
ಆಡು ಮುಟ್ಟದ ಸೊಪ್ಪಿಲ್ಲ ಎಂಬ ಖ್ಯಾತಿಯು
ಜ್ಞಾನಪೀಠ ಪ್ರಶಸ್ತಿ ಪಡೆದ ಹೆಗ್ಗಳಿಕೆಯು/
ಪರಿಸರ ಪ್ರೇಮ ತೋರಿದ ಸಾಹಿತಿಯಿವರು
ಕವನ ಕಾದಂಬರಿಗಳಿಗೂ ಪ್ರಸಿದ್ಧರು//
ಕಣ್ಣಿಗೆ ಕಟ್ಟುವಂತೆ ಬರಹಗಳ ಚಿತ್ರಣವು
ಇವರೊಬ್ಬ ನಡೆದಾಡುವ ವಿಶ್ವಕೋಶವು/
ಮೂಕಜ್ಜಿಯ ಕನಸು ಕಾದಂಬರಿಗೆ ಖ್ಯಾತರು
ಕೋಟ ಶಿವರಾಮ ಕಾರಂತರೆಂದೇ ಪರಿಚಿತರು//
ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದವರು
ತಾವು ನಾಸ್ತಿಕರಾಗಿ ಆಸ್ತಿಕರನ್ನು ಗೌರವಿಸಿದರು/
ಯಕ್ಷಗಾನ ಕಲೆಯನ್ನು ನೆಚ್ಚಿಕೊಂಡವರು
ವೈಜ್ಞಾನಿಕ ಬರಹಗಳಲ್ಲೂ ಮಿಂಚಿದವರು//
ಪ್ರವಾಸದ ಅನುಭವನನ್ನೇ ಕಥನವಾಗಿಸಿದರು
ನಾಟಕ ಪ್ರಕಾರಗಳಲ್ಲೂ ಹೆಜ್ಜೆಯಿಟ್ಟವರು/
ಕನ್ನಡದ ಕಂಪನ್ನು ಎಲ್ಲೆಡೆಯೂ ಪಸರಿಸಿದರು
ಪ್ರೀತಿಯ ಕಾರಂತಜ್ಜರಾಗಿ ಅಚ್ಚಳಿಯದೆ ಉಳಿದರು//
ದೀಪಿಕಾ,ಉಡುಪಿ.
೨೭)
ಅಂತರಂಗದ ದೇವ
ಅಂತರಂಗದ ಆತ್ಮವೆಂಬ ಜ್ಯೋತಿಯೇ
ಶಕ್ತಿಯು ನೀನೇ ಯುಕ್ತಿಯು ನೀನೇ
ನನ್ನೊಂದಿಗೆ ಇರುವ ದೇವನು ನೀನೇ
ವಿಚಾರಗಳ ಮಂಥಿಸುತ ಸಲಹೆ ಕೊಡುವ ಗುರು ನೀನೇ//
ಸತ್ಯ-ಅಸತ್ಯತೆಗಳ ಅರುಹುವ ದೇವದೇವನು ನೀನೇ
ಅಡಿಯಿಡುವೆಡೆ ಎಚ್ಚರಿಸುವ ಗುರು ನೀನೇ
ಕಿವಿ ಹಿಂಡಿ ತಟ್ಟಿ ತದಿಕಿ ಬುದ್ಧಿ ಹೇಳುವ ದೇವನು ನೀನೇ
ಭವದ ಭ್ರಮೆಯ ಬಿಡಿಸುವ ಪರಮಾತ್ಮ ನೀನೇ//
ಸಮ್ಮಿತ್ರನು ನೀನೇ ಸಹಚಾರಿಯು ನೀನೇ
ಸರಳತೆಯ ಸಾಕಾರಮೂರ್ತಿ ನೀನೇ
ಸದಾಚಾರದ ಬೀಜ ಮೋಳೆಸುವ ದೇವನು ನೀನೇ
ಸದ್ಭಾವದ ಜ್ಯೋತಿ ಬೆಳಗಿಸುವ ಅಂತರಾತ್ಮ ನೀನೇ//
ಸನ್ಮಾರ್ಗಿಯೇ ಸರ್ವಾಂತರ್ಯಾಮಿಯೇ
ದೇವದೇವನೆ ನಿನಗೆ ನೂರು ನಮನ
ದೇವ ದೇವನೆ ನಿನಗೆ ಸಾವಿರ ನಮನ
ಅಂತರಂಗದಿ ಹೊಳೆವ ಜ್ಯೋತಿ ಇತ್ತ ಕರುಣಾಕರ ನೀನೇ//
ಡಾ ಅನ್ನಪೂರ್ಣ ಹಿರೇಮಠ ಶಿಕ್ಷಕಿ ಬೆಳಗಾವಿ
No comments:
Post a Comment
ಡಾ. ಕೋಟ ಶಿವರಾಮ ಕಾರಂತರು ಕನ್ನಡ ಸಾಹಿತ್ಯಲೋಕದ ಹೊಳೆಯುವ ವಜ್ರ. ಅವರೊಂದು ವಿಶಾಲವಾದ ವಿಸ್ತಾರವಾಗಿ ಹರಡಿಕೊಂಡಿರುವ ಆಲದ ಮರ. ಯುವಕವಿಗಳಾದ ನಾವು ಅವರ ನೆರಳಿನಡಿಯಲ್ಲಿ ಸಾಗೋಣ. ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಳ್ಳೋಣ.
ಧನ್ಯವಾದಗಳು . ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಸದಾ ಇರಲಿ.
ಬತ್ತದ ತೊರೆ ಸ್ನೇಹ ಬಳಗದಿಂದ...